
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಬಂಟ್ವಾಳ್), ಮೇ. 28: ಎನ್ಕೌಂಟರ್ ಸ್ಪೆಷಲಿಸ್ಟ್ ಕಾರ್ಕಳ ಮೂಲದ ಮುಂಬಯಿ ಪೊಲೀಸ್ ಅಧಿಕಾರಿ ದಯಾ ನಾಯಕ್ ಇದೀಗ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಆಗಿ ಪದೋನ್ನತಿ ಹೊಂದಿದ್ದಾರೆ.
ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್ ಅವರು ಮುಂಬಯಿ ಕ್ರೈಂ ಬ್ರಾಂಚ್ ಸೀನಿಯರ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದರು. 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ನಾಯಕ್ ಅವರು 2004ರ ವೇಳೆಗೆ ಮುಂಬಯಿ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳ ಎನ್ಕೌಂಟರ್ ಮಾಡಿದ್ದರು.
ಈ ಮೂಲಕ ಮುಂಬಯಿ ಜನತೆ, ಪ್ರಮುಖವಾಗಿ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೂರು ವರ್ಷಗಳ ಕಾಲ ಮಹಾರಾಷ್ಟ್ರಭಯೋತ್ಪಾದನೆ ನಿಗ್ರಹ ದಳದಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ಸಮಾಜ ವಿರೋಧಿ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಡ್ರಗ್ಸ್ ಪ್ರಕರಣಕ್ಕೂ ಕಡಿವಾಣ ಹಾಕಿದರು.
ಕಾರ್ಕಳ ಸಮೀಪದ ಎಣ್ಣೆಹೊಳೆ ಬಣ್ಣಾ ನಾಯಕ್ ಹಾಗೂ ರಾಧಾ ನಾಯಕ್ ದಂಪತಿ ಪುತ್ರ ದಯಾ ನಾಯಕ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಎಣ್ಣೆಹೊಳೆಯಲ್ಲಿ ಪೂರೈಸಿದ್ದರು. ಬಳಿಕ ಉದ್ಯೋಗ ಅರಸಿ ಮುಂಬಯಿಯತ್ತ ಮುಖ ಮಾಡಿದ ಅಲ್ಲಿ ಕ್ಯಾಂಟೀನ್ ಸೇರಿದರು. ಬಹಳ ಕಷ್ಟದಿಂದಲೇ ಓದು ಮುಂದುವರಿಸಿ ಮುಂಬಯಿನಲ್ಲೇ ಪದವಿಧರನಾದರು. ಅನಂತರ ಪ್ಲಂಬರ್ ಸೂಪರ್ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ದಯಾನಾಯಕ್ 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದು, ಇದೀಗ ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿರುವರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.