
kallianpurdotcom: Mob 9741001849
( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )
ಉಡುಪಿ: ಸಿನೆಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಎಂಟನೇ ವರ್ಷದ ಸಂಸ್ಥಾಪನ ಸಂಭ್ರಮದ ಪ್ರಯುಕ್ತ ನಿರಂತರ್ ಉದ್ಯಾವರ ಸಂಘಟನೆಯು ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿಮಿಟೆಡ್ ಇವರ ಸಹಯೋಗದೊಂದಿಗೆ ಉಡುಪಿ ಶೋಕ ಮಾತಾ ದೇವಾಲಯದ ವಠಾರದಲ್ಲಿರುವ ಅವೇ ಮರಿಯ ಸಭಾಂಗಣದಲ್ಲಿ ಅಗಸ್ಟ್ 8ರಿಂದ 10ನೇ ತಾರೀಖಿನ ವರೆಗೆ ಮೂರು ದಿನದ ನಿರಂತರ್ ಸಿನಿಮಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಪರಸ್ಪರ ವಿಭಜಿಸುವ ವ್ಯವಸ್ಥೆಯಲ್ಲಿ ಪರಸ್ಪರ ಸೌಹಾರ್ದತೆಯನ್ನು ಬೆಸೆಯುವ ಕಾರ್ಯ ನಡೆಯಬೇಕಿದೆ. ಸಾಹಿತ್ಯ, ನಾಟಕ ಹಾಗೂ ಸಿನಿಮಾಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿರಂತರ್ ಉದ್ಯಾವರ ಸಂಘಟನೆ ಕಲೆ ಮತ್ತು ಸಾಹಿತ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಪತ್ರಕರ್ತ ಮೈಕಲ್ ರೋಡ್ರಿಗಸ್ ಮಾತನಾಡಿ, ಸಿನೆಮಾಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಒಂದು ಉತ್ತಮ ಅವಕಾಶವಾಗಿದ್ದು, ಅಂತಹ ಸಿನೆಮಾಗಳಿಗೆ ಸಮಾಜದ ಪ್ರೋತ್ಸಾಹ ಕೂಡ ಅಗತ್ಯವಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮನ್ಸಾರೆ ನಿರ್ದೇಶನದ ಆಕ್ಟ್ 1978 ಸಿನೆಮಾ ಪ್ರದರ್ಶನಗೊಂಡಿತು. ಪ್ರತಿ ದಿನ ಸಂಜೆ ಗಂಟೆ 6.15ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಲಾಭಿಮಾನಿಗಳಿಗೆ ಉಚಿತ ಪ್ರವೇಶವಿರಲಿದೆ. ಸಾಮಾಜಿಕ ಕಳಕಳಿಯ ಅಯ್ದ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳಾದ 19.20.21 ಮತ್ತು ಫೋಟೋ ಚಲನಚಿತ್ರಗಳು ಪ್ರದರ್ಶನವಾಗಲಿದೆ.
ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಶನ್ ಕ್ರಾಸ್ಟೋ, ಕಾರ್ಯದರ್ಶಿ ಒಲಿವೀರಾ ಮಥಾಯಸ್, ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಜೆಸಿಂತಾ ರಿಚರ್ಡ್ ಡಿಸೋಜಾ ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈಕಲ್ ಡಿಸೋಜಾ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.