Skip to main content

ದಸರೋತ್ಸವ ಪ್ರಯುಕ್ತ ಶ್ರೀ ಪೇಜಾವರ ಮಠದಲ್ಲಿ ನೆರವೇರಿಸಲ್ಪಟ್ಟ ದುರ್ಗಾನಮಸ್ಕಾರ ಪೂಜೆ.

By October 1, 2025Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.29: ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿನ ಉಡುಪಿ ಶ್ರೀ ಪೇಜಾವರ ಮಠದ (ಮಧ್ವ ಭವನದ) ಮುಂಬಯಿ ಶಾಖೆಯಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ಶರನ್ನವರಾತ್ರಿ ಪ್ರಯುಕ್ತ ವಾರ್ಷಿಕ ದುರ್ಗಾ ನಮಸ್ಕಾರ ಪೂಜೆ ಶ್ರದ್ಧಾಪೂರ್ವಕ ವಾಗಿ ನೆರವೇರಿಸಲ್ಪಟ್ಟಿತು.

ಗುರುವರ್ಯ ಶ್ರೀ ಕೃಷ್ಣೆೈಕ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅನುಗ್ರಹ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಇಂದಿಲ್ಲಿ ಸೋಮವಾರ ಸಂಜೆ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿಯ ಡಾ| ಎ.ಎಸ್ ರಾವ್ ಮತ್ತು ಆಶಾ ಎ.ರಾವ್ ಯಜಮಾನತ್ವದಲ್ಲಿ, ಭಕ್ತರನೇಕರ ಕೂಡುವಿಕೆಯಲ್ಲಿ ಪೇಜಾವರ ಮಠದ ವ್ಯವಸ್ಥಾಪಕ ಡಾ| ರಾಮದಾಸ್ ಉಪಾಧ್ಯಾಯ ರೆಂಜಾಳ ತನ್ನ ಪ್ರಧಾನ ಪೌರೋಹಿತ್ಯ ಮತ್ತು ನೇತೃತ್ವದಲ್ಲಿ ದುರ್ಗಾ ಪೂಜೆ ನೆರವೇರಿಸಿದರು. ಪುರೋಹಿತ ಗಿರೀಶ್ ಪಾಟೀಲ್ ಮತ್ತು ರಮೇಶ್ ಭಟ್ ಪೂಜಾಧಿಗಳಿಗೆ ಸಹಕರಿಸಿದರು. ಶ್ಯಾಮಲ ಎ.ಶಾಸ್ತ್ರಿ ಮುಂದಾಳುತ್ವದಲ್ಲಿ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಹಾಗೂ ವಿವಿಧ ಭಜನಾ ಮಂಡಳಿಗಳು ಭಜನೆಗೈದರು.

ದುರ್ಗೆ ದುಷ್ಟ ಶಿಕ್ಷಕಿಯಾಗಿ ಶಕ್ತಿಯ ರೂಪವಾಗಿರುವ ಕಾರಣ ನವರಾತ್ರಿ ದಿನಗಳಲ್ಲಿ ದೇವಿಯ ಒಂಬತ್ತು ರೂಪಗಳನ್ನು ವಿಶೇಷವಾಗಿ  ಪೂಜಿಸಲಾಗುತ್ತದೆ. ಜೀವನದಲ್ಲಿ ಭಯ ಮತ್ತು ಅಡೆತಡೆಗಳಿಂದ ನೀವು ತೊಂದರೆಗೀಡಾಗಿದ್ದರೆ ಈ ದುರ್ಗಾ ಮಂತ್ರವನ್ನು ಪಠಿಸಿದಾಗ ಎಲ್ಲವೂ ಸರಿ ಹೊಂದುವುದು. ದುರ್ಗಾಮಾತೆಯು ಲೋಕದಲ್ಲಿನ ಸಮಸ್ತ ಜೀವಿರಾಶಿಗಳನ್ನು ಸಮೃದ್ಧಿಯಲ್ಲಿರಿಸಿ ನೆಮ್ಮದಿಯ ಬದುಕನ್ನು ಒದಗಿಸಲಿ ಜೊತೆಗೆ ಎಲ್ಲಾ ಭಕ್ತರಿಗೂ ಮಾತೆಯು ಸುಖಶಾಂತಿಯನ್ನು ಪ್ರಾಪ್ತಿಸಿ ಸರ್ವರ ಬದುಕನ್ನು ಫಲಪ್ರದಗೊಳಿಸಲಿ ಎಂದು ರಾಮದಾಸ್ ಉಪಾಧ್ಯಾಯ ಉಪಸ್ಥಿತ ಭಕ್ತರನ್ನು ಅನುಗ್ರಹಿಸಿದರು.

ಪುರೋಹಿತ ಪ್ರವೀಣ್ ಜೋಶಿ ಮಾತನಾಡಿ ದುರ್ಗಾ ನಮಸ್ಕಾರ ಪೂಜೆಯಿಂದ ಭಕ್ತರಿಗೆ ದುರ್ಗಾ ದೇವಿಯ ಆಶೀರ್ವಾದ, ರಕ್ಷಣೆ ಮತ್ತು ಯಶಸ್ಸು ಫಲಿಸುವುದು. ಇದು ಅನಾಹುತ, ಕೆಟ್ಟ ಗ್ರಹ ದೋಷಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ಜೀವನದಲ್ಲಿ ಧನಾತ್ಮಕತೆ ಹಾಗೂ ಸಮೃದ್ಧಿಯನ್ನು ತರಲು ಪ್ರಾರ್ಥನಾವಿಧಿಯಾಗಿದೆ. ದೀಪ ಹಚ್ಚಿ, ಅರಿಶಿನ, ಕುಂಕುಮ, ಹೂವು ಅರ್ಪಿಸಿ, ಮಂತ್ರ ಪಠಿಸಿ ದೇವಿಯನ್ನು ಆಹ್ವಾನಿಸುವ ಮೂಲಕ ಈ ಪೂಜೆ ನಡೆಸುವುದರಿಂದ ದುರ್ಗಾ ದೇವಿಯ ಮಂತ್ರಗಳನ್ನು ಪಠಿಸುವುದರಿಂದ ನಮ್ಮೆಲ್ಲಾ ಸಂಕಷ್ಟಗಳನ್ನು ದೂರಾಗಿಸುತ್ತಾಳೆ ಎನ್ನುವ ನಂಬಿಕೆಯಿದೆ ಎಂದು ದುರ್ಗಾ ನಮಸ್ಕಾರ ಪೂಜೆ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅವಿನಾಶ್ ಶಾಸ್ತ್ರಿ, ಶ್ರೀ ಪೇಜಾವರ ಮಠ ಮುಂಬಯಿ ವ್ಯವಸ್ಥಾಪಕರಾದ ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಮಠದ ಪುರೋಹಿತರಾದ ಉಂಡಾರು ರಾಘವೇಂದ್ರ ಭಟ್, ಮುಕುಂದ ಬೈತ್‌ಮಂಗಳ್ಕರ್, ವಿಷ್ಣುತೀರ್ಥ ಸಾಲಿ ಮತ್ತಿತರರ ಪುರೋಹಿತರು ಹಾಜರಿದ್ದರು. ಮಠದ ಆರ್ಚಕವೃಂದ ಹಾಗೂ ಸಿಬ್ಬಂದಿಗಳ ವಿಶೇಷ ಸಹಯೋಗ, ಭಕ್ತಾಭಿಮಾನಿಗಳ ಸಹಕಾರದಿಂದ ವಾರ್ಷಿಕ ದುರ್ಗಾ ನಮಸ್ಕಾರ ಪೂಜೆಯು ಸಂಪನ್ನಗೊಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.