Skip to main content
www.kallianpur.com | Email : kallianpur7@gmail.com | Mob : 9741001849

ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವ-ಗೋಕುಲಾಷ್ಟಮಿ ಸಂಭ್ರಮಕ್ಕೆ ಚಾಲನೆ.

By September 7, 2023Mumbai News
kallianpurdotcom: 07/09/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.೦೬: ಮಹಾರಾಷ್ಟ್ರದ ಮಥುರಾ ಪ್ರಸಿದ್ಧಿಯ ಬೃಹನ್ಮುಂಬಯಿ ಸಯಾನ್ ಪಶ್ಚಿಮದಲ್ಲಿನ ಗೋಕುಲಾ ಮಂದಿರದಲ್ಲಿ ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ದಿನವಾದ ಇಂದು ೨೦೨೩ನೇ ವಾರ್ಷಿಕ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಪ್ರದಾಯಿಕವಾಗಿ ಚಾಲನೆಯನ್ನೀಡಲಾಯಿತು.

ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ನವೀಕೃತ ಗೋಕುಲ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀ ಗೋಪಾಲಕೃಷ್ಣನ ಸಾನಿಧ್ಯದಲ್ಲಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ೧೦೮ ರಜತ ಕಲಶ ಪ್ರತಿಷ್ಠೆಗೈದು ಶ್ರೀಕೃಷ್ಣ ದೇವರ ೫೨೫೧ನೇ ಜನ್ಮದಿನಕ್ಕೆ ಸಿದ್ಧತೆ ನಡೆಸಲಾಯಿತು.

ಅಲಂಕಾರ ತಜ್ಞರ ಮಾರ್ಗದರ್ಶನ, ನೇತೃತ್ವದಲ್ಲಿ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ದೇವಾಲಯವನ್ನು ವಿಶೇಷ ಪುಷ್ಪಾಲಂಕಾರಗಳಿಂದ ಶೃಂಗರಿಸಿ, ಮನಾಕರ್ಷಕ ವಿದ್ಯುದೀಪಾಲಂಕಾರಗಳಿಂದ ಸಚ್ಚುಗೊಳಿಸಲಾಗಿದ್ದ ಗೋಕುಲದಲ್ಲಿ ಶ್ಲೋಕ ಪಠಣ, ಭಜನೆ, ಕೀರ್ತನೆ, ಭಕ್ತಿಗೀತೆಗಳ ಸಂಗಮಗಳೊಂದಿಗೆ ನೆರೆದ ಭಕ್ತರು ಕೃಷ್ಣಾಷ್ಟಮಿಗೆ ಮೆರಗು ನೀಡಿದ್ದು ಸಂಜೆಯಿಂದ ರಾತ್ರಿ ವರೆಗೆ ವೈದಿಕರಿಂದ ಸಂಕಲ್ಪ ಸಹಿತ ಸಾಂಪ್ರದಾಯಿಕ ರಜತ ಕಲಶಾಭಿಷೇಕವು ನೆರವೇರಿಸಿದರು. ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಶ್ರೀ ಕೃಷ್ಣನಿಗೆ ಸ್ವತಃ ಕಲಶಾಭಿಷೇಕಗೈದರು. ಅಭಿಷೇಕದ ನಂತರ ಪುರೋಹಿತರು ಕಲಶಾಭಿಷೇಕರಿಗೆ ಕಲಶತೀರ್ಥ ಸಹಿತ ರಜತಕಲಶವನ್ನು ಪ್ರಸಾದ ರೂಪವಾಗಿ ನೀಡಿ ಅನುಗ್ರಹಿಸಿದರು. ತಡರಾತ್ರಿ ವಿಷ್ಣು ಸಹಸ್ರನಾಮ, ಶ್ರೀ ಕೃಷ್ಣಾಷ್ಟೋತ್ತರ ಪಠನೆ ಮತ್ತು ಮಧ್ಯರಾತ್ರಿ ಧಾರ್ಮಿಕ ವಿಧಿಗಳೊಂದಿಗೆ ಜನ್ಮಾಷ್ಟಮಿ ಪೂಜೆ, ಅರ್ಘ್ಯ ಪ್ರದಾನ, ಉಪಾಹಾರ ನೆರವೇರಿಸಲ್ಪಟ್ಟಿತು. ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ, ಗೋಕುಲದ ಆರ್ಚಕ ಗಣೇಶ್ ಭಟ್, ಸಹ ಆರ್ಚಕ ಗುರುಪ್ರಸಾದ್ ಭಟ್ ವಿವಿಧ ಪೂಜಾಧಿಗಗಳನ್ನು ನೆರವೇರಿಸಿದರು.

ಪುರೋಹಿತರಾದ ಚಂದ್ರಶೇಖರ್ ಭಟ್, ಸುಬ್ರಹ್ಮಣ್ಯ ಭಟ್ ಮಟ್ಟು, ಕುಮಾರ್ ಭಟ್ ವಸಾಯಿ, ಪ್ರಕಾಶ್ ಭಟ್ ಗೋರೆಗಾಂ, ಭವಾನಿ ಶಂಕರ್ ಭಟ್ ಇವರು ಶ್ರೀ ಶ್ರೀನಿವಾಸ ಭಟ್ ಧರೆಗುಡ್ಡೆ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ೧೦೮ ಕಲಶ ಪ್ರತಿಷ್ಠೆಗೈದು ಸಾಯಂಕಾಲ ಶ್ರೀಕೃಷ್ಣನಿಗೆ ಕಲಶಾಭಿಷೇಕ ನೇರವೇರಿಸಿ ಹರಸಿದರು. ಬಿಎಸ್‌ಕೆಬಿಎ ಮತ್ತು ಜಿಪಿಟಿ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದರು.

ಜಿಎಸ್‌ಬಿ ಮಹಿಳಾ ವಿಭಾಗ ಮಾಟುಂಗಾ ಮತ್ತು ಗೋಕುಲ ಭಜನಾ ಮಂಡಳಿಗಳು ಭಜನೆಗೈದವು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಡಾ| ಸುಶೀಲಾ ರಾವ್ ಬೆಂಗಳೂರು ಬಳಗವು ಭಕ್ತಿ ರಸಮಂಜರಿ ಪ್ರಸ್ತುತ ಪಡಿಸಿತು.

ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿಗಳಾದ ಚಿತ್ರಾ ಮೇಲ್ಮನೆ ಮತ್ತು ಪ್ರಶಾಂತ್ ಹೆರ್ಲೆ, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಜಿಪಿಟಿ ಟ್ರಸ್ಟ್ನ ಕಾರ್ಯದರ್ಶಿ ಎಸ್. ರಾಮವಿಠಲ ಕಲ್ಲೂರಾಯ, ವಿಶ್ವಸ್ಥ ಸದಸ್ಯರುಗಳಾದ ಕೃಷ್ಣ ಆಚಾರ್ಯ, ಶೈಲಿನಿ ರಾವ್, ಕೃಷ್ಣರಾಜ್ ತಂತ್ರಿ, ಅನಿಲ್ ಗುಪ್ತಾ, ಮಧುಸೂದನ್ ಅಗರ್ವಾಲ್, ಕಿಶನ್ ಸಿಂಘಾಲ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಶಶಿಧರ ಶೆಟ್ಟಿ ಇನ್ನಂಜೆ, ಸುಬ್ಬಯ್ಯ ವಿ.ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ಚಂದ್ರಶೇಖರ್ ಎಸ್.ಶೆಟ್ಟಿ, ಹರಿಭಟ್ ಮುಂಡ್ಕೂರು, ಸಿಎ| ಸುಧೀರ್ ಆರ್.ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಭಕ್ತರನೇಕರು ಭಾಗವಹಿಸಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.