Skip to main content
www.kallianpur.com | Email : kallianpur7@gmail.com | Mob : 9741001849

ಪೇಜಾವರ ಮಠದಲ್ಲಿ ನೆರವೇರಿದ ತಪ್ತ ಮುದ್ರಾ ಧಾರಣೆ ಅಜ್ಞಾನದ ನಾಶಕ್ಕೆ ಮುದ್ರಾಧಾರಣೆಯೂ ಪರಿಹಾರ: ವಿದ್ಯಾರಾಜೇಶ್ವರಿಶ್ರೀ

By June 29, 2023Kannada News
kallianpurdotcom: 29/06/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.೨೯: ಭಗವಂತನ ಮುದ್ರೆಗಳು ಶಾಶ್ತ್ರೋಕ್ರವಾಗಿವೆ ಅನ್ನುವುದು ಶಾಸ್ತ್ರಗಳು ಹೇಳುತ್ತವೆ. ಭಗವಂತನ ಜ್ಞಾನ ಪಡೆದಾಗ ಮಾತ್ರ ಒಳ್ಳೆಯ ಮುಕ್ತಿ ಸಾಧ್ಯ. ಮನುಕುಲದಲ್ಲಿನ ಅಜ್ಞಾನದ ನಾಶಕ್ಕೆ ಮುದ್ರಾಧಾರಣೆಯೂ ಒಂದು ಪರಿಹಾರವಾಗಿದ್ದು, ಇದು ಅಂಧಾಕಾರದ ನಿವಾರಣೆಗೆ ಶಾಸ್ತ್ರಾನುಸಾರವಾಗಿ ಬಂದ ಕ್ರಮವಾಗಿದೆ. ಭಗವಂತನ ಮುದ್ರೆಗಳಲ್ಲಿ ಚಕ್ರ ಮತ್ತು ಶಂಖ ಪ್ರಧಾನವಾದುದು. ರೋಗರುಜಿನಗಳ ಮುಕ್ತಿಗೂ ಮುದ್ರಾಧಾರಣೆ ಅವಶ್ಯ. ಏಕಾದಶಿ ವ್ರತ, ಚಾತುರ್ಮಾಸ್ಯ ವ್ರತ, ಇಂತಹ ಬೇರೆಬೇರೆ ವ್ರತ, ಆಚರಣೆಗಳನ್ನು ನೆರವೇರಿಸಿದಾಗ ಪುಣ್ಯದ ಫಲ ಫಲಿಸುವುದು. ಹಿಂದೂ ಸಂಪ್ರದಾಯದಲ್ಲಿ ಶಂಖ ಮತ್ತು ಚಕ್ರವು ಮಹತ್ವದ್ದಾಗಿದ್ದು ಇವು ನಮ್ಮಲ್ಲಿನ ಅಜ್ಞಾನವನ್ನು ಗಲಾಡಿಸುತ್ತವೆೆ. ಪಾಪದ ನಿವೃತ್ತಿಯೊಂದಿಗೆ ಪುಣ್ಯದ ಸಂಪಾದನೆಯ ಅವಶ್ಯಕತೆವಿದೆ. ಮುಂಬಯಿಯಲ್ಲಿ ಸಹಸ್ರ ಭಕ್ತರಿದ್ದು ಅವರಿಗೆ ಮುದ್ರಾಧಾರಣೆ ಮಾಡುವಲ್ಲಿ ಗುರುಗಳ ಆಜ್ಞೆಯಾಗಿದೆ. ಇಲ್ಲಿನ ಭಕ್ತರ ಶಿಷ್ಯತ್ವ ಇನ್ನಷ್ಟು ಬೆಳೆಯಲು ಈ ಅವಕಾಶ ಸಂಪನ್ನಗೊಂಡಿದೆ ಎಂದು ಶ್ರೀ ಪಲಿಮಾರು ಶ್ರೀಗಳ ಸಂಜಾತ (ಕಿರಿಯ ಯತಿ) ರಾದ ಶ್ರೀ ವಿದ್ಯಾರಾಜೇಶ್ವರಿ ತೀರ್ಥರು ತಿಳಿಸಿದರು.

ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಪೇಜಾವರ ಮಠಧೀಶ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಇಂದಿಲ್ಲಿ ಗುರುವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಶೋಭಕೃತ್ ಸಂವತ್ಸರದಲ್ಲಿ ನಡೆಸಲಾದ ಪುಣ್ಯಾಧಿ ಧಾರ್ಮಿಕ ಕಾರ್ಯಕ್ರಮದಲ್ಲಿ ತಪ್ತ ಮುದ್ರಾಧಾರಣೆ ನಡೆಸಿ ನೆರೆದ ಭಕ್ತಾಭಿಮಾನಿಗಳನ್ನು ಅನುಗ್ರಹಿಸಿ ವಿದ್ಯಾರಾಜೇಶ್ವರಿಶ್ರೀ ನುಡಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಶ್ರೀಕೃಷ್ಣ ವಿಠಲ ಪ್ರತಿಷ್ಠಾನ (ರಿ.) ಇದರ ಸಂಸ್ಥಾಪಕರಾದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಪೇಜಾವರ ಮಠ ಮುಂಬಯಿ ಶಾಖಾ ಪ್ರಬಂಧಕರುಗಳಾದ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಸಹ ಪುರೋಹಿತರುಗಳಾದ ಮುಕುಂದ ಬೈತಮಂಗಳ್ಕರ್, ಪವನ್ ಭಟ್ ಅಣ್ಣಿಕೇರಿ, ಪರೇಲ್ ಶ್ರೀನಿವಾಸ ಭಟ್, ಶ್ರೀಪತಿ ಭಟ್ ಅಂಬೋಲಿ, ರಮೇಶ್ ಭಟ್, ದಿನೇಶ್ ಉಪರ್ಣ, ರಾಧಾಕೃಷ್ಣ ಭಟ್, ವಾಸುದೇವ ಉಪಾಧ್ಯಾಯ (ಪಲಿಮಾರು) ಸೇರಿದಂತೆ ಅನೇಕ ಪುರೋಹಿತರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ತಪ್ತ ಮುದ್ರಾಧಾರಣೆ ಮಾಡಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು.

ಮಧ್ವೇಶ ಭಜನಾ ಮಂಡಳಿ ಹಾಗೂ ಇತರ ಭಜನಾ ಮಂಡಳಿಗಳು ಭಜನೆಗೈದರು. ಪೇಜಾವರ ಮಠದ ಹಿರಿಯ ಪುರೋಹಿತ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಶ್ರೀಗಳವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.